ಬಜ್ಪೆಯಲ್ಲಿ ಪಟಾಕಿ ಅಂಗಡಿಯಿಂದ ಹಪ್ತಾ ವಸೂಲಿ: ಸುಹಾಸ್ ಶೆಟ್ಟಿ ಸಹಚರನ ವಿರುದ್ಧ ಕೇಸ್ ದಾಖಲು
ಮಂಗಳೂರು: ಬಜ್ಪೆ ಪರಿಸರದ ಪಟಾಕಿ ಅಂಗಡಿಯಲ್ಲಿ ಪಟಾಕಿ ಖರೀದಿ ಹಣ ನೀಡದೇ ಹಪ್ತಾ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಫಾಜಿಲ್ ಕೊಲೆ ಪ್ರಕರಣದ ಆರೋಪಿ, ರೌಡಿಶೀಟರ್ ಪ್ರಶಾಂತ್ ಅಲಿಯಾಸ್ ಪಚ್ಚು ಮತ್ತು ಆತನ ಸಹವರ್ತಿ ಮೇಲೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ 22ರಂದು ಪಟಾಕಿ ಮಾರಾಟ ಮಾಡುತ್ತಿದ್ದವರನ್ನು ಹೆದರಿಸಿ ಹಣ ಕೇಳಿದ್ದಾನೆ. ಅಲ್ಲದೆ ಹಣ ಕೊಡದೆ ಪಟಾಕಿ ಕೊಡಿ ಎಂದು ಹೆದರಿಸಿದ್ದಾರೆ. ಬಳಿಕ ಅಂಗಡಿಯವರು ಹೆದರಿಕೊಂಡು ಸೈಲೆಂಟ್ ಇದ್ದರು. ಆದರೆ ಒಬ್ಬರು ಬಂದು ಘಟನೆ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಪ್ರಶಾಂತ್, ಇತ್ತೀಚೆಗೆ ಕೊಲೆಯಾದ ಸುಹಾಸ್ ಶೆಟ್ಟಿ ಸಹವರ್ತಿಯಾಗಿದ್ದು ಬಜ್ಪೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಈತನ ಜೊತೆಗಿದ್ದ ಅಶ್ವಿತ್ ಕ್ರಿಮಿನಲ್ ಹಿನ್ನೆಲೆಯಿಲ್ಲ, ಇದೀಗ ರೌಡಿಶೀಟರ್ ಜೊತೆ ತಿರುಗಾಡಿ ಕೇಸ್ ಹಾಕಿಸಿಕೊಂಡಿದ್ದಾನೆ.
ಘಟನೆ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳ ಜೊತೆಗೆ ತಿರುಗಾಡದಂತೆ ಈ ಮೊದಲೇ ಹೇಳಿದ್ದೆ. ರೌಡಿಗಳ ಜೊತೆಗಿದ್ದು ಅಪರಾಧದಲ್ಲಿ ಸಿಲುಕಬೇಡಿ ಎಂದೂ ಹೇಳಿದ್ದೆ. ನೀವು ನಮ್ಮ ಮಾತು ಕೇಳ್ತಾ ಇಲ್ಲ ಎನಿಸತ್ತೆ. ನಮ್ಮ ಮಾತು ಕೇಳಲ್ಲಾಂದ್ರೆ ನಾವು ಏನು ಮಾಡಬೇಕೆಂದು ಗೊತ್ತಿದೆ. ನಾವು ನಮ್ಮ ಕೆಲಸ ಮಾಡ್ತೀವಿ. ನಿಮ್ಮ ಇಷ್ಟದಂತೆ ಮಾಡ್ಕೊಂಡ್ರೆ ನಮ್ಗೆ ತೊಂದರೆ ಇಲ್ಲ. ಏನು ಬೇಕಾದರೂ ಮಾಡ್ಕೊಂಡು ಹೋಗಿ. ಪೊಲೀಸರು ತಮ್ಮ ಕೆಲಸ ಮಾಡುತ್ತಾರೆ ಎಂದು ವಾರ್ನಿಂಗ್ ಮಾಡಿದ್ದಾರೆ.




