ವಿಟ್ಲ: ಮದುವೆಗೆ ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ಪ್ರಕರಣ: ಬಶೀರ್ ವಿಟ್ಲ ಮತ್ತು ಮಾಣಿ ಸೆಪಿಯಾ ಪ್ರಕರಣದ ಕಿಂಗ್ ಪಿನ್
ಮಂಗಳೂರು: ಗಲ್ಫ್ ರಾಷ್ಟ್ರದಲ್ಲಿ ಉದ್ಯಮಿಯಾಗಿರುವ ಕೇರಳ ಮೂಲದ ವ್ಯಕ್ತಿಯನ್ನು ಮದುವೆಗೆ ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ಮಾಡಿದ್ದು, ಈ ಬಗ್ಗೆ ದೂರು ಕೊಟ್ಟು ಎಫ್ಐಆರ್ ದಾಖಲಾಗಿ ವಾರ ಕಳೆದರೂ ವಿಟ್ಲ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಬಶೀರ್ ಮತ್ತು ಮಾಣಿ ಸೆಪಿಯಾ ಎಂಬವರ ಮೇಲೆ ಹಲವಾರು ಕೇಸುಗಳಿದ್ದು ಹನಿಟ್ರ್ಯಾಪ್ ದಂಧೆಯನ್ನೇ ಮಾಡುತ್ತಿದ್ದಾರೆ. ಪೊಲೀಸರಲ್ಲಿ ಪ್ರಶ್ನಿಸಿದರೆ, ಆರೋಪಿಗಳಿಗೆ ವಿಚಾರಣೆಗೆ ಬರಲು ನೋಟಿಸ್ ಕೊಟ್ಟಿದ್ದೇವೆಂದು ಅಸಹಾಯಕತೆ ತೋರುತ್ತಾರೆ ಎಂದು ಸಂತ್ರಸ್ತ ವ್ಯಕ್ತಿಯ ಪರ ವಕೀಲೆ ಸೌದಾ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸಂತ್ರಸ್ತ ಮಲಪ್ಪುರಂ ಮೂಲದ ಮಹಮ್ಮದ್ ಅಶ್ರಫ್ ತಾವರಕಡನ್ ಜೊತೆಗೆ ಸುದ್ದಿಗೋಷ್ಟಿ ನಡೆಸಿದ ವಕೀಲೆ ಸೌದಾ, ಅಶ್ರಫ್ ಅವರನ್ನು ಮಂಗಳೂರಿನ ಸಿಟಿ ಸೆಂಟರ್ ಮಾಲ್ ಗೆ ಕರೆಸಿದ್ದ ಬಶೀರ್ ಮತ್ತು ಮಾಣಿ ಸೆಪಿಯಾರಿದ್ದ ತಂಡವು ಅಲ್ಲಿ ಹೆಣ್ಣು ತೋರಿಸಿದೆ. ಆದರೆ ಈಕೆ ಕೇರಳದ ಹುಡುಗಿಯಲ್ಲ ಎಂದು ತಿಳಿದು ಬೇಡ ಎಂದಿದ್ದರು. ಆನಂತರ, ವಿಟ್ಲದ ಬಳಿಯ ತನ್ನದೇ ಮನೆಗೆ ಕರೆಸಿದ್ದ ಬಶೀರ್, ಅಲ್ಲಿ ಒಬ್ಬಳು ಹುಡುಗಿಯನ್ನು ತೋರಿಸಿ ಜೊತೆಗೆ ಕೂರಿಸಿ ವಿಡಿಯೋ ಚಿತ್ರೀಕರಣ ಮಾಡಿದ್ದರು.
ಆನಂತರ, ಅಶ್ರಫ್ ಮದುವೆಯಾಗಲು ಒಪ್ಪದೇ ಇದ್ದುದಕ್ಕೆ ನಿನ್ನ ಖಾಸಗಿ ವಿಡಿಯೋ ಇದೆಯೆಂದು ಬ್ಲಾಕ್ಮೇಲ್ ಮಾಡಿದ್ದಾರೆ. ಮೊದಲಿಗೆ 5 ಲಕ್ಷ ನಗದು ಕೊಟ್ಟಿದ್ದು, ಹಣ ಪಡೆದ ಬಳಿಕ ಥಳಿಸಿ ಒಂದು ಕೋಟಿ ನೀಡುವಂತೆ ಒತ್ತಾಯಿಸಿದ್ದರು. ಕೇರಳದ ಸೆಪಿಯಾ ಎಂಬ ಬ್ರೋಕರ್ ಮೂಲಕ ಇವರಿಗೆ ಬಶೀರ್ ತಂಡದ ಪರಿಚಯ ಆಗಿತ್ತು. ಮಾಣಿ ಸೆಪಿಯಾ ಮೇಲೆ ಮಡಿಕೇರಿ ಸೇರಿದಂತೆ ಹಲವಾರು ಕಡೆ ಹನಿಟ್ರ್ಯಾಪ್ ಕೇಸು ಇದೆ. ಇದರಲ್ಲಿ ಅಶ್ರಫ್ ಅವರು ಮಾಣಿ ಸೆಪಿಯಾ ಮತ್ತು ಆಕೆಯ ಗಂಡ ಸರಫುದ್ದೀನ್ ಮತ್ತು ಬಶೀರ್ ಬ್ಯಾಂಕ್ ಖಾತೆಗೆ 5 ಲಕ್ಷ, 9 ಲಕ್ಷ ಹೀಗೆ ಹಣ ಹಾಕಿರುವ ದಾಖಲೆ ಇದೆ. ಹೀಗಿದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸದೆ ಮೀನ ಮೇಷ ತೋರುತ್ತಿದ್ದಾರೆ.
ಈಗ ಮಹಮ್ಮದ್ ಅಶ್ರಫ್ ಮೇಲೆ ಕೇಸು ಹಿಂಪಡೆಯುವಂತೆ ಮತ್ತು ಇಲ್ಲದಿದ್ದರೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿ ಮುಸ್ತಫಾ ಎಂಬಾತ ಬೆದರಿಕೆ ಹಾಕಿದ್ದಾನೆ. ರಾಜಕೀಯ ಪಕ್ಷಗಳಲ್ಲಿ ಇರುವ ಧಾರ್ಮಿಕ ಮುಖಂಡರು ಕೂಡ ಬೆದರಿಕೆ ಹಾಕುತ್ತಿದ್ದಾರೆ. ಇದರ ಬಗ್ಗೆ ವಿಟ್ಲ ಪೊಲೀಸರ ಸೂಚನೆಯಂತೆ ಬಂಟ್ವಾಳ ಠಾಣೆಗೆ ಜೀವ ಬೆದರಿಕೆ ದೂರು ನೀಡಿದ್ದೇವೆ. ಆರೋಪಿಗಳು ನಟೋರಿಯಸ್ ಆಗಿದ್ದು, ಹನಿಟ್ರ್ಯಾಪ್ ಮಾಡುವುದನ್ನೇ ಬಿಸಿನೆಸ್ ಮಾಡಿದ್ದಾರೆ. ಬಶೀರ್ ತಾಯಿ ಸೇರಿದಂತೆ ಏಳು ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಯಾವುದೇ ಕಾರಣಕ್ಕೂ ಆರೋಪಿಗಳ ಬಂಧನ ಆಗದೆ ಬಿಡುವುದಿಲ್ಲ. ಅಮಾಯಕ ವ್ಯಕ್ತಿಯನ್ನು ಬೆದರಿಸಿ 40 ಲಕ್ಷ ಹಣ ಪೀಕಿದ್ದಾರೆ, ಮುಮ್ತಾಜ್ ಆಲಿ ಎಂಬ ಪ್ರಭಾವಿ ವ್ಯಕ್ತಿಯೊಬ್ಬರು ಎರಡು ವರ್ಷದ ಹಿಂದೆ ಇಂತಹದ್ದೇ ಜಾಲದಲ್ಲಿ ಸಿಲುಕಿ ಸಾವನ್ನಪ್ಪಿದ್ದರು. ಈ ಜಿಲ್ಲೆಯಲ್ಲಿ ಮತ್ತೊಂದು ಮುಮ್ತಾಜ್ ಆಲಿ ಆಗುವ ಪ್ರಮೇಯ ಬರಬಾರದು ಎಂದು ಸೌದಾ ಹೇಳಿದರು.
ನಾಲ್ಕು ದಿನಗಳ ಹಿಂದೆ ಕಾರ್ಕಳದಲ್ಲಿಯೂ ಯುವಕನೊಬ್ಬ ಹನಿಟ್ರ್ಯಾಪ್ ಜಾಲದಲ್ಲಿ ಬೇಸತ್ತು ಸಾವಿಗೆ ಶರಣಾಗಿದ್ದಾನೆ. ಅದರಲ್ಲೂ ಪೊಲೀಸರು ಆರೋಪಿಗಳ ಬಂಧನ ಮಾಡಿಲ್ಲ. ಆ ಯುವಕನ ಹೆತ್ತವರಿಗೆ ಉಚಿತವಾಗಿ ಕಾನೂನು ನೆರವು ನೀಡಲು ರೆಡಿಯಿದ್ದೇನೆ ಎಂದೂ ಸೌದಾ ಹೇಳಿದರು. ಸಂತ್ರಸ್ತ ಮಹಮ್ಮದ್ ಅಶ್ರಫ್ ಅವರಿಗೆ ಕನ್ನಡ ಬರುವುದಿಲ್ಲ. ಮದುವೆಯಾಗಿ ಮೂವರು ಮಕ್ಕಳಿದ್ದು, ಹೆಂಡ್ತಿಗೆ 15 ವರ್ಷಗಳಿಂದ ಕಾಯಿಲೆ ಇದೆ. ಹೀಗಾಗಿ ಕುಟುಂಬದ ಒಪ್ಪಿಗೆ ಮೇರೆಗೆ ಮತ್ತೊಂದು ಮದುವೆಯಾಗಲು ಹೊರಟಿದ್ದರು. ಕೇರಳದ್ದೇ ಹುಡುಗಿ ಆಗಬೇಕೆಂದು ಬ್ರೋಕರ್ ಸೆಪಿಯಾರಲ್ಲಿ ಹೇಳಿದ್ದರು. ಆದರೆ ಇವರನ್ನು ಹುಡುಗಿ ತೋರಿಸುವ ನೆಪದಲ್ಲಿ ಮಾಣಿ ಸೆಪಿಯಾ ಮತ್ತು ಬಶೀರ್ ತಂಡ ಬ್ಲಾಕ್ಮೇಲ್ ಮಾಡಿದೆ ಎಂದು ಹೇಳಿದರು.




