ಅತ್ರಾಡಿ ಮಸೀದಿಯಲ್ಲಿ ಎಕೆಎಂಎಸ್ ಬಸ್ ಮಾಲಕ ಸೈಫ್ ಅಂತ್ಯ ಸಂಸ್ಕಾರ
ಉಡುಪಿ: ಮಲ್ಪೆ ಕೊಡವೂರು ಸಮೀಪದ ಸಾಲ್ಮರ ಎಂಬಲ್ಲಿ ಶನಿವಾರ ಹಾಡುಹಗಲೆ ಬರ್ಬರವಾಗಿ ಕೊಲೆಯಾದ ಎಕೆಎಂಎಸ್ ಬಸ್ ಮಾಲಕ, ರೌಡಿಶೀಟರ್ ಸೈಫ್ ಯಾನೆ ಸೈಫುದ್ದೀನ್ ಆತ್ರಾಡಿಯ ಮೃತದೇಹದ ಮರಣೋತ್ತರ ಪರೀಕ್ಷೆ ಮಣಿಪಾಲ ಕೆಎಂಸಿ ಆಸ್ಪತ್ರೆಯ ಶವಗಾರದಲ್ಲಿ ಶನಿವಾರ ರಾತ್ರಿ ನಡೆದಿದ್ದು ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಇಂದು ಬೆಳಗ್ಗೆ ಮಣಿಪಾಲದ ಅವರ ಮನೆಯಿಂದ ಮೃತದೇಹದ ಮೆರವಣಿಗೆಯು ಆತ್ರಾಡಿ ಮಸೀದಿವರೆಗೆ ನಡೆಯಿತು. ಅವರೇ ಮಾಲೀಕರಾಗಿದ್ದ ಬಸ್ಸುಗಳು ಸಹ ಮೆರವಣಿಗೆಯಲ್ಲಿ ಸೇರಿಕೊಂಡಿದ್ದು, ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಅತ್ರಾಡಿ ಮಸೀದಿಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ನಂತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ತಿಳಿದುಬಂದಿದೆ.




