ಉಡುಪಿ: ಧರ್ಮಸ್ಥಳ ಸ್ವಸಹಾಯ ಸಂಘದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಬಿಜೆಪಿ ಮುಖಂಡನ ವಿರುದ್ಧ FIR ದಾಖಲು
ಉಡುಪಿ: ಧರ್ಮಸ್ಥಳ ಸ್ವಸಹಾಯ ಸಂಘದ ಸೇವಾ ಪ್ರತಿನಿಧಿ ಮಹಿಳೆಯೊಂದಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಬಿಜೆಪಿ ಮುಖಂಡನ ವಿರುದ್ಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ರಟ್ಟಾಡಿ ಗ್ರಾಮದ ಮಣಿಮಕ್ಕಿ ಎಂಬಲ್ಲಿನ ನವೀನ್ ಚಂದ್ರ ಶೆಟ್ಟಿ ಎಂದು ಗುರುತಿಸಲಾಗಿದೆ.
ಸೆ.5ರಂದು ನಡೆಯಲಿದ್ದ ಧರ್ಮಸ್ಥಳದ ಧರ್ಮ ಸಂರಕ್ಷಣಾ ಯಾತ್ರೆಯ ಸಭೆಯ ಆಮಂತ್ರಣ ಪತ್ರಿಕೆ ನೀಡಲು, ರಟ್ಟಾಡಿ ಶ್ರೀರಟ್ಟೆಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮುಖ್ಯಸ್ಥ ಹಾಗೂ ಬಿಜೆಪಿ ಮುಖಂಡ ನವೀನ ಚಂದ್ರ ಶೆಟ್ಟಿಗೆ ಧರ್ಮಸ್ಥಳ ಸ್ವಸಹಾಯ ಸಂಘದ ಸೇವಾ ಪ್ರತಿನಿಧಿಯಾಗಿ ಕೆಲಸ ಮಾಡಿಕೊಂಡಿದ್ದ 29ರ ಹರೆಯದ ರಟ್ಟಾಡಿ ಗ್ರಾಮದ ಮಹಿಳೆ ಸೆ.2ರಂದು ಕರೆ ಮಾಡಿದ್ದರು.
ಈ ವೇಳೆ ನವೀನ್ಚಂದ್ರ ಶೆಟ್ಟಿ ತಾನು ಮನೆಯಲ್ಲಿರುವುದಾಗಿ ಹೇಳಿದ್ದು, ಮಧ್ಯಾಹ್ನ 1ಗಂಟೆಯೊಳಗೆ ಮನೆಗೆ ಬರುವಂತೆ ತಿಳಿಸಿದರು. ಅದರಂತೆ ಮಹಿಳೆ ಮಧ್ಯಾಹ್ನ 12ಗಂಟೆಯ ಸುಮಾರಿಗೆ ನವೀನ್ ಚಂದ್ರ ಶೆಟ್ಟಿಯ ಮನೆಗೆ ಹೋದಾಗ ಅವರು ಜಗುಲಿಯ ಕುರ್ಚಿಯಲ್ಲಿ ಕುಳಿತ್ತಿದ್ದರು. ಈ ವೇಳೆ ಮಹಿಳೆಯು ಆಮಂತ್ರಣ ಪತ್ರಿಕೆಯನ್ನು ನವೀನ್ಚಂದ್ರ ಶೆಟ್ಟಿಯ ಕೈಗೆ ಕೊಟ್ಟಾಗ ಆತ ಮಹಿಳೆಯ ಕೈಯನ್ನು ಸ್ವರ್ಶಿಸಿ ಆಹ್ವಾನ ಪತ್ರಿಕೆ ತೆಗೆದುಕೊಂಡನು ಎಂದು ದೂರಲಾಗಿದೆ.





