ಈಶ್ವರಮಂಗಲದಲ್ಲಿ ಮನಸೂರೆಗೊಂಡ ಆಕರ್ಷಣೀಯ ಮೀಲಾದ್ ಘೋಷಣಾ ರ್ಯಾಲಿ
ಪುತ್ತೂರು: ತ್ವೈಬಾ ಎಜ್ಯುಕೇಶನಲ್ ಈಶ್ವರಮಂಗಲ ವತಿಯಿಂದ ಆಗಸ್ಟ್ 23 ರಂದು ಸಂಜೆ ಆಯೋಜಿಸಲಾದ ವಿಶ್ವಕ್ಕೆ ಶಾಂತಿ, ಸೌಹಾರ್ದತೆ, ಸಮಾನತೆ, ಸಹಬಾಳ್ವೆ ಮತ್ತು ಸಾಮರಸ್ಯದ ಉದಾತ್ತವಾದ ಸಂದೇಶ ಸಾರಿದ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 1500ನೇ ಜನ್ಮದಿನದಿಂದ ಅನುಗ್ರಹೀತಗೊಂಡ ಪುಣ್ಯ ರಬೀಉಲ್ ತಿಂಗಳ ಆಗಮನವನ್ನು ಸ್ವಾಗತಿಸುವ ಆಕರ್ಷಣೀಯ ಮೀಲಾದ್ ಘೋಷಣಾ ರ್ಯಾಲಿಯು ಸಂಸ್ಥೆಯಿಂದ ಪ್ರಾರಂಭಗೊಂಡು ಈಶ್ವರಮಂಗಲ ಜಂಕ್ಷನ್ ನಲ್ಲಿ ಸಮಾಪ್ತಿಗೊಂಡಿತು.

ರ್ಯಾಲಿಯುದ್ದಕ್ಕೂ ಪ್ರವಾದಿಯರ ಪ್ರಕೀರ್ತನೆ, ಶ್ವೇತವಸ್ತ್ರದಾರಿಗಳಾದ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ, ಫ್ಲವರ್ ಶೋ, ಬಲೂನ್ ಶೋ ವಿಶೇಷ ಆಕರ್ಷಣೆ ನೀಡಿತು. ಸಂಸ್ಥೆಯ ಗೌರವಾಧ್ಯಕ್ಷರಾದ ಹಂಝ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಉಮರ್ ಜಿಫ್ರಿ ತಂಙಳ್ ರವರ ದುಆ ಮೂಲಕ ಚಾಲನೆ ನೀಡಲಾಯಿತು.
ಮಹ್ರೂಫ್ ಸುಲ್ತಾನಿ ಸಂದೇಶ ಭಾಷಣ ಮಾಡಿ ‘ಪ್ರವಾದಿಯವರು ಕೇವಲ ಮುಸ್ಲಿಮರ ಮಾತ್ರವಲ್ಲ ಮನುಕುಲದ ಮಾರ್ಗದರ್ಶಿಯಾಗಿದ್ದಾರೆ’ ಎಂಬುವುದನ್ನು ಸೂಕ್ತ ಪುರಾವೆ, ಚರಿತ್ರೆಗಳ ಮೂಲಕ ಸ್ಪಷ್ಟಪಡಿಸಿದರು. ಎಸ್ಸೆಸ್ಸೆಫ್, ಎಸ್ ವೈ ಎಸ್, ಮುಸ್ಲಿಂ ಜಮಾಅತ್ ನಾಯಕರು, ಕಾರ್ಯಕರ್ತರು ಸಹಿತ ಪುಟಾಣಿ ಮಕ್ಕಳಿಂದ ಹಿರಿವಯಸ್ಸಿನವರೆಗಿನ ಪ್ರವಾದಿ ಪ್ರೇಮಿಗಳು ಶಿಸ್ತುಬದ್ಧವಾಗಿ ಭಾಗವಹಿಸಿ ರ್ಯಾಲಿಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷರಾದ ಇಂಜಿನಿಯರ್ ಶಫೀಕ್ ಸಅದಿ ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು. ಸ್ವಾದಿಕ್ ಮಾಸ್ಟರ್ ಸ್ವಾಗತಿಸಿ, ಕಬೀರ್ ಹಿಮಮಿ ಧನ್ಯವಾದ ಸಲ್ಲಿಸಿದರು.
















