February 1, 2026

ವಿಟ್ಲ: ಜನಪ್ರಿಯ ಹೆಲ್ತ್ ಸೆಂಟರ್ ಉದ್ಘಾಟನೆ: ವಿಟ್ಲ ಭಾಗದ ಜನರಿಗೆ ಈ ಹೆಲ್ತ್ ಸೆಂಟರ್ ಸಹಕಾರಿ: ಒಡಿಯೂರು ಶ್ರೀ

0
image_editor_output_image-1963022054-1756031429066

ವಿಟ್ಲ: ಆರೋಗ್ಯ ಮಹಾಭಾಗ್ಯ, ಮನುಷ್ಯನಿಗೆ ಆಯುಷ್ಯ – ಆರೋಗ್ಯ ಎರಡೂ ಬೇಕಿದೆ. ಮನುಷ್ಯನ ಬದುಕು ಚಲನ ಶೀಲವಾದುದು. ಜನಪ್ರಿಯತೆಯ ಹಿಂದೆ ಜನಹಿತ ಇದೆ. ಶಿಕ್ಷಣ, ವೈದ್ಯಕೀಯ ಎರಡೂ ವ್ಯಾಪಾರ ಆಗವಾಗಬಾರದು. ಅವು ಸೇವೆ ಆಗಬೇಕು. ಜನಪರವಾದ ಸೇವೆ ನಮ್ಮದಾಗಬೇಕು. ಮಾನಸಿಕ, ಶಾರೀರಿಕ ಸ್ವಾಸ್ಥ್ಯ ಕಾಪಾಡಲು ಮಾರ್ಗದರ್ಶನ ಅಗತ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ‌ ಗುರುದೇವಾನಂದ‌ ಸ್ವಾಮೀಜಿಯವರು ಹೇಳಿದರು. ಅವರು ವಿಟ್ಲದ ಶ್ರೀಹರಿಹರ ಕಾಂಪ್ಲೆಕ್ಸ್ ನಲ್ಲಿ ಆ.24ರಂದು ನೂತನವಾಗಿ ಆರಂಭಗೊಂಡ ಜನಪ್ರಿಯ ಹೆಲ್ತ್ ಸೆಂಟರ್ ಅನ್ನು‌ ಉದ್ಘಾಟಿಸಿ ಆಶೀರ್ವಚನ‌ ನೀಡಿದರು.

ಶಾಸಕರಾದ ಅಶೋಕ್ ಕುಮಾರ್ ರೈರವರು ಮಾತನಾಡಿ ಜನಪ್ರಿಯ ಸಮೂಹ ಸಂಸ್ಥೆ ಎಲ್ಲಾ ರಂಗದಲ್ಲಿ ತೊಡಗಿಕೊಂಡ ಸಂಸ್ಥೆ. ಜನರ ಬಹು ಕಾಲದ ಬೇಡಿಕೆ‌ ಈಡೇರಿದಂತಾಗಿದೆ. ಈ ಭಾಗದ ಜನರಿಗೆ ಜನಪ್ರಿಯ ಹೆಲ್ತ್ ಸೆಂಟರ್ ಬಹಳಷ್ಟು ಸಹಕಾರಿಯಾಗಿದೆ. ಸಂಸ್ಥೆಯಿಂದ ಉತ್ತಮ ಸೇವೆ ಸಿಗುವಂತಾಗಲಿ ಎಂದರು.

ಮಾಜಿ ಸಚಿವರಾದ ಬಿ. ರಮಾನಾಥ ರೈರವರು ಸ್ಕ್ಯಾನಿಂಗ್ ಮತ್ತು ಎಕ್ಸ್ ರೇ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ ಹುಟ್ಟೂರಿಗೆ ಆರೋಗ್ಯ ಸೇವೆ ನೀಡಲು ಹೊರಟ ಡಾ.ಅಬ್ದುಲ್ ಬಶೀರ್ ರವರ ಪ್ರಯತ್ನ ಅಭಿನಂದನೀಯ. ವಿಟ್ಲ ತಾಲೂಕಿನ ಪ್ರಮುಖ‌ ಕೇಂದ್ರ. ಸಾಮಾಜಿಕ ವ್ಯವಸ್ಥೆಯಲ್ಲಿ‌ ನಮ್ಮ‌‌ ಸಂಬಂಧ ಬಹಳಷ್ಟಿದೆ. ತಾಲೂಕು ಆಗಲು‌ ಎಲ್ಲ ಅರ್ಹತೆಯನ್ನು ಹೊಂದಿರುವ ವಿಟ್ಲದ ಮಕುಟಕ್ಕೆ ಮತ್ತೊಂದು ಗರಿ. ಸಂಸ್ಥೆಯಿಂದ ಇಲ್ಲಿನ ಬಡ, ದುರ್ಬಲ ವರ್ಗದವರಿಗೆ ಸಹಕಾರಿಯಾಗಲಿ.

ಧಾರ್ಮಿಕ ಪಂಡಿತರಾದ ಅಲ್ ಹಾಜಿ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟುರವರು ಸಂದೇಶ ನೀಡಿ ಅಭೂತಪೂರ್ವ ಕಾರ್ಯಕ್ರಮ ಇದಾಗಿದೆ. ಜನರೆಡೆಗೆ‌ ತಲುಪುವ ಸೇತು ಜನಪ್ರಿಯ. ಆತ್ಮದ ಭಾರ ಕಡಿಮೆಯಾಗಲು ಜನಪರ‌ಸೇವೆ ಮಾಡಬೇಕು‌. ಜೊತೆಯಾಗಿದ್ದರೆ ಬೆಳವಣಿಗೆ ಸಾಧ್ಯ ಎನ್ನುವುದಕ್ಕೆ ಬದ್ರಿಯಾ ಫ್ಯಾಮಿಲಿ ಸ್ಪಷ್ಟ ನಿದರ್ಶನ. ವೃತ್ತಿ ಕರ್ತವ್ಯವಾಗಬೇಕು ಎಂದರು.

ವಿಟ್ಲ ಶೋಕ ಮಾತಾ ಇಗರ್ಜಿಯ ಧರ್ಮಗುರುಗಳಾದ ಫಾ. ಐವನ್ ಮೈಕಲ್ ರೊಡ್ರಿಗಸ್ ರವರು ಸಂದೇಶ ನೀಡಿ ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಶುಬ್ರ ಮನಸ್ಸಿಗೆ ಉತ್ತಮ ದೇಹ ಅಗತ್ಯ.ಸಂಸ್ಥೆಯಿಂದ ಈ ಭಾಗದ ಜನರಿಗೆ ಉತ್ತಮ ಸೇವೆ ಸಿಗುವಂತಾಗಲಿ. ಧರ್ಮಗಳು ಉತ್ತಮ‌ ಮೌಲ್ಯವನ್ನು ಭೋದಿಸುತ್ತದೆ ಎಂದರು.

ಕೃಷ್ಣಯ್ಯ ವಿಟ್ಲ, ಕೆ.ಪಿ.ಸಿ.ಸಿ.ಸದಸ್ಯರಾದ ಎಂ.ಎಸ್.ಮಹಮ್ಮದ್, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು. ಜೆ.ಡಿ.ಎಸ್. ಪ್ರಮುಖರಾದ ಮಹಮ್ಮದ್ ಕುಂಞ, ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ರಶೀದ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕ‌ ಗೌಡ ನಾಯ್ತೋಟು, ಸದಸ್ಯರಾದ ಅರುಣ್ ವಿಟ್ಲ, ಹರೀಶ್ ವಿಟ್ಲ, ವಿ.ಕೆ.ಎಂ. ಅಶ್ರಫ್, ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಬಾಬು ಕೊಪ್ಪಳ, ಡಿ.ಗ್ರೂಪ್ ಅಧ್ಯಕ್ಷರಾದ ಶಾಕಿರ್ ಅಳಕೆಮಜಲು, ಕಟ್ಟಡದ ಮಾಲಕರಾದ ಸುರೇಶ್ ಬನಾರಿ, ಹಿರಿಯ ವೈದ್ಯರಾದ ಬದ್ರುದ್ದೀನ್ ಎಂ.ಎನ್., ಬಂಟ್ವಾಳ ತಾಲೂಕು ಹೆಲ್ತ್ ಆಫೀಸರ್ ಅಶೋಕ್ ರೈ, ಅಕ್ರಮ‌ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಬದ್ರಿಯಾ ಕುಟುಂಬದ ಹಿರಿಯರಾದ ಖಾದರ್ ಹಾಜಿ‌ ವಿಟ್ಲ, ಜನಪ್ರಿಯ ಫೌಂಡೇಶನ್‌ನ ನಿರ್ದೇಶಕರಾದ ನೌಶೀನ್ ಬದ್ರಿಯಾ, ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲರಾದ ಲಿವಿನ್ ಕ್ಸೇವಿಯರ್, ಹಾಸನ ಜನಪ್ರಿಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರವೀಣ್ ಕುಮಾರ್, ಕೀಳು ಮತ್ತು ಮೂಳೆ ತಜ್ಞರಾದ ನೂಮಾನ್, ಪ್ರಮುಖರಾದ ಹನೀಫ್ ಸಖಾಫಿ, ಉಮ್ಮಾರ್ ಮುಸ್ಲಿಯಾರ್, ಸುದರ್ಶನ್ ಪಡಿಯಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜನಪ್ರಿಯ ಫೌಂಡೇಶನ್ ಇದರ ಅಧ್ಯಕ್ಷರಾದ ಡಾ. ಅಬ್ದುಲ್ ಬಶೀರ್ ವಿ.ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಿ.ಇ.ಒ. ಕಿರಾಶ್ ಪರ್ತಿಪ್ಪಾಡಿ ಸ್ವಾಗತಿಸಿರು.
ಡಾ. ಶಾರುಕ್ ಅಬ್ದುಲ್ಲಾ ವಂದಿಸಿದರು. ಲೊಕೇಶ್ ಶೆಟ್ಟಿ ಬಾಕ್ರಬೈಲ್ ಕಾರ್ಯಕ್ರಮ ನಿರೂಪಿಸಿದರು.

ಊರಿನ‌ ಜನರಿಗೆ ತುರ್ತು ವೈದ್ಯಕೀಯ ಸೇವೆ
ನಮ್ಮ ಊರಿನ ಜನರಿಗೆ ತುರ್ತು ವೈದ್ಯಕೀಯ ಸೇವೆ ನೀಡುವ ನಿಟ್ಟಿನಲ್ಲಿ ವಿಟ್ಲದಲ್ಲಿ ಜನಪ್ರಿಯ ಹೆಲ್ತ್ ಸೆಂಟರ್ ಅನ್ನು ಪ್ರಾರಂಭಿಸಿದ್ದೇವೆ. ಆರಂಭದ ದಿನಗಳಲ್ಲಿ ಬೆಳಿಗ್ಗಿನಿಂದ ರಾತ್ರಿ 10 ಗಂಟೆ ವರೆಗೆ ತಜ್ಞ ವೈದ್ಯರು ಸೇವೆಗೆ ಲಭ್ಯರಿರಲಿದ್ದಾರೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಮಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುವುದು. ಜನರ ಅಗತ್ಯತೆಗಳನ್ನು ಮನಗಂಡು ಮುಂದಿನ ದಿನಗಳಲ್ಲಿ 24 ಗಂಟೆ ಸೇವೆ ನೀಡುವ ಯೋಜನೆ ಇದೆ. ಇನ್ನುಳಿದಂತೆ ದಿನದ 24 ಘಂಟೆ ಆ್ಯಂಬುಲೆನ್ಸ್ ಸೇವೆ ಲಭ್ಯವಿದೆ. ಈ ವರೆಗೆ ನಮ್ಮ ಎಲ್ಲಾ ಸಂಸ್ಥೆ ಗಳಿಗೆ ಈ ಭಾಗದ ಜನರಿಂದ‌ ಉತ್ತಮ ಪ್ರತಿಕ್ರೀಯೆ ಲಭ್ಯವಾಗಿದೆ. ಈ ನಿಟ್ಟಿ‌ನಲ್ಲಿ ನಾವು ತಮಗೆಲ್ಲರಿಗೂ ಆಭಾರಿಯಾಗಿದ್ದೇವೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತಿದ್ದೇವೆ.
ಡಾ. ಅಬ್ದುಲ್ ಬಶೀರ್ ವಿ.ಕೆ. ಅಧ್ಯಕ್ಷರು, ಜನಪ್ರಿಯ ಫೌಂಡೇಶನ್

ಲಭ್ಯವಿರುವ ಸೇವೆಗಳು:
*ತುರ್ತು ಚಿಕಿತ್ಸೆ
*ತಜ್ಞ ವೈದ್ಯರ ಸೌಲಭ್ಯ
*ಡಿಜಿಟಲ್ ಎಕ್ಸ್ ರೇ
*ಹೈಟೆಕ್ ಪ್ರಯೋಗಾಲಯ
*ಔಷದಾಲಯ
*24 ಗಂಟೆ ಆ್ಯಂಬುಲೆನ್ಸ್ ಸೇವೆ

ಲಭ್ಯವಿರುವ ವೈದ್ಯರು:
*ಜನರಲ್ ಮತ್ತು ಇಂಟರ್ನಲ್ ಮೆಡಿಸಿನ್
*ಕೀಳು ಮತ್ತು ಮೂಳೆ ತಜ್ಞರು
*ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು
*ಮೂತ್ರಶಾಸ್ತ್ರ ಮತ್ತು ಆಂಡ್ರೋಲಜಿ
*ಮಕ್ಕಳ ತಜ್ಞರು
*ಕಿವಿ, ಮೂಗು ಮತ್ತು ಗಂಟಲು ತಜ್ಞರು
*ಸಾಮಾನ್ಯ ಶಸ್ತ್ರಚಿಕಿತ್ಸೆ

Leave a Reply

Your email address will not be published. Required fields are marked *

error: Content is protected !!