ಎಸ್ಐಟಿ ತನಿಖೆ ನಿಲ್ಲಿಸಲು ಮಾಡಿರುವ ಷಡ್ಯಂತ್ರವಿದು: ಮಹೇಶ್ ಶೆಟ್ಟಿ ತಿಮರೋಡಿ
ಮಂಗಳೂರು: ‘ಎಸ್ಐಟಿ ತನಿಖೆ ನಿಲ್ಲಿಸಲು ಮಾಡಿರುವ ಷಡ್ಯಂತ್ರವಿದು. ಇದು ಬಿಜೆಪಿಯವರ ಪಾಪದ ಕೂಸು. ಅವರು ಸರ್ವ ನಾಶ ಆಗಿ ಹೋಗುತ್ತಾರೆ’ ಎಂದು ಮಹೇಶ್ ಶೆಟ್ಟಿ ತಿಮರೋಡಿ ಆಕ್ರೋಶ ವ್ಯಕ್ತಪಡಿಸಿದರು.
ತಮ್ಮನ್ನು ವಶಕ್ಕೆ ಪಡೆಯಲು ಬ್ರಹ್ಮಾವರ ಠಾಣೆಯ ಪೊಲೀಸರು ಮನೆಗೆ ಬಂದಾಗ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನನ್ನ ಜೀವಕ್ಕೆ ಏನಾದರೂ ಅಪಾಯ ಆದರೆ ಅದಕ್ಕೆ ರಾಜ್ಯ ಸರ್ಕಾರ ಮತ್ತು ಬಿಜೆಪಿ ಕಾರಣ. ಸೌಜನ್ಯಾಗೆ ನ್ಯಾಯ ಸಿಗಬೇಕು. ನ್ಯಾಯ ಖಂಡಿತಾ ಸಿಗುತ್ತದೆ’ ಎಂದು ಹೇಳಿದರು. ಬಳಿಕ ಖಾಸಗಿ ಕಾರಿನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟೆಣ್ಣನವರ ಪೊಲೀಸರ ಜೊತೆ ತೆರಳಿದರು. ಈ ವೇಳೆ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಅವರ ಅಭಿಮಾನಿಗಳು ‘ಸೌಜನ್ಯಾಗೆ ನ್ಯಾಯ ಸಿಗಲಿ… ಭಾರತ್ ಮಾತಾ ಕಿ ಜೈ…’ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಶಕ್ಕೆ ಪಡೆಯುವ ವೇಳೆ ತಿಮರೋಡಿ ಮನೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.




