ಬಂಟ್ವಾಳ: ಲಕ್ಷಾಂತರ ರೂ. ಮೌಲ್ಯದ ಅಡಿಕೆ ಕಳ್ಳತನ ಪ್ರಕರಣ: ಆರೋಪಿಯನ್ನು ಬಂಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು
ಬಂಟ್ವಾಳ: ಲಕ್ಷಾಂತರ ರೂ. ಮೌಲ್ಯದ ಅಡಿಕೆ ಕಳ್ಳತನ ಪ್ರಕರಣದಲ್ಲಿ ಆರೋಪಿ ಓರ್ವನನ್ನು ಬಂಧಿಸಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಆರೋಪಿಯನ್ನು ಸುಳ್ಯ ದ ಪೈಚಾರು ಗ್ರಾಮ, ಸತೀಶ್ (29 ವರ್ಷ) ಎಂದು ಗುರುತಿಸಲಾಗಿದೆ.
ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ, ಮಣಿ ನಾಲ್ಕೂರು ಗ್ರಾಮದ ಪೂಂಜೂರು ಎಂಬಲ್ಲಿ, ದಿನಾಂಕ: 03-07-2025 ರಿಂದ 22-07-2025 ರ ಅವಧಿಯಲ್ಲಿ ಸುಮಾರು 45 ಪ್ಲಾಸ್ಟಿಕ್ ಚೀಲದಲ್ಲಿದ್ದ ರೂ. 2,20,000/- ಮೌಲ್ಯದ ,ಓಣ ಅಡಿಕೆ ಕಳವಿನ ಬಗ್ಗೆ ದಿನಾಂಕ: 23-07-2025 ರಂದು ಅಕ್ರ 112/2025 ಕಲಂ 306, ಬಿ.ಎನ್ .ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.
ಸದ್ರಿ ಕಳವು ಪ್ರಕರಣ ಪತ್ತೆ ಕಾರ್ಯಕ್ಕಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಶಿವಕುಮಾರ ಬಿ.ರವರ ನೇತೃತ್ವದಲ್ಲಿ, ಮಂಜುನಾಥ್ ಟಿ. ಪೊಲೀಸ್ ಉಪ ನಿರೀಕ್ಷಕರು, ಬಂಟ್ವಾಳ ಗ್ರಾಮಾಂತರ ಠಾಣೆ, ಎ.ಎಸ್. ಐ. ಜಿನ್ನಪ್ಪ ಗೌಡ, ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗಳಾದ ರಾಜೇಶ್, ನಝೀರ್, ಲೋಕೇಶ್, ಪ್ರಶಾಂತ ಪೊಲೀಸ್ ಕಾನ್ಸಟೇಬಲ್ಗಳಾದ ಮಾರುತಿ, ಹನುಮಂತ ರವರುಗಳನ್ನು ಒಳಗೊಂಡ ತನಿಖಾ ತಂಡವು ತನಿಖೆ ನಡೆಸಿ, ದಿನಾಂಕ: 28-07-2025 ರಂದು ಆರೋಪಿಯನ್ನು ದಸ್ತಗಿರಿ ಮಾಡಿ, ಕಳವುಗೈದ ರೂ. 74000/- ಮೌಲ್ಯದ 15 ಚೀಲ ಒಣ ಅಡಿಕೆ, ಕಳವು ಅಡಿಕೆಯನ್ನು ಮಾರಾಟ ಮಾಡಿದ ನಗದು ಹಣ ರೂ 70,000/- ವನ್ನು ಒಟ್ಟು ಮೌಲ್ಯ 1,44,000/- ಆಗಿದ್ದು ಹಾಗೂ ಕೃತ್ಯಕ್ಕೆ ಬಳಸಿದ ಆಪೆ ಗೂಡ್ಸ್ ಅಂದಾಜು ಮೌಲ್ಯ 80,000/- ಆಗಿದ್ದು ಒಟ್ಟು 2,24,000/- ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಮಾನ್ಯ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.




