ಮಂಗಳೂರು: ಪ್ರತಿಭಟನೆಯ ವೇಳೆ ವಾಹನ ಸಂಚಾರಕ್ಕೆ ಅಡಚಣೆ: ಹಿಂದೂ ಹಿತರಕ್ಷಣಾ ಸಮಿತಿಯ ವಿರುದ್ಧ FIR
ಮಂಗಳೂರು: ನಗರದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ರಸ್ತೆ ತಡೆ, ಷರತ್ತುಗಳ ಉಲ್ಲಂಘನೆ ಆರೋಪದಲ್ಲಿ ಸಂಘಟಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವುದಾಗಿ ಆರೋಪಿಸಿ ಹಿಂದೂ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಬುಧವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆದಿತ್ತು.
ಪ್ರತಿಭಟನಾ ಮೆರವಣಿಗೆಯು ಬೆಳಗ್ಗೆ 10 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾಗಿ ಮಂಗಳೂರು ನಗರ ಕ್ಲಾಕ್ ಟವರ್ ಬಳಿಯ ಮಿನಿ ವಿಧಾನ ಸೌಧದ ಎದುರು 10.45 ಗಂಟೆಗೆ ಕೊನೆಗೊಂಡಿತ್ತು.
ಮಿನಿವಿಧಾನ ಸೌಧದ ಎದುರು ಪ್ರತಿಭಟನಾಕಾರರು 11 ಗಂಟೆಯ ಸುಮಾರಿಗೆ ರಸ್ತೆಗಿಳಿದು, ರಸ್ತೆ ತಡೆಯನ್ನುಂಟು ಮಾಡಿ ಪ್ರತಿಭಟಿಸಿದ್ದಾರೆ. ಇದರ ಪರಿಣಾಮವಾಗಿ ಪ್ರತಿಭಟನಾ ಸ್ಥಳದ ಬಳಿ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಚಾರಕ್ಕೆ ಮತ್ತು ಜನ ಸಂಚಾರಕ್ಕೆ ತಡೆಯುಂಟಾಗಿರುತ್ತದೆ.
ಪ್ರತಿಭಟನೆಗೆ ವಿಧಿಸಲಾಗಿದ್ದ ಷರತ್ತುಗಳನ್ನು ಉಲ್ಲಂಘಿಸಿ, ರಸ್ತೆ ತಡೆ ನಿರ್ಮಿಸಿ ವಾಹನಗಳ ಮತ್ತು ಜನರ ಸಂಚಾರಕ್ಕೆ ಅಡ್ಡಪಡಿಸಡಿರುವ ಆರೋಪದಲ್ಲಿ ಆಯೋಜಕರು ಮತ್ತು ಇತರರ ವಿರುದ್ಧ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಅ.ಕ್ರ 230/2024 : 126 (2), 270, 285, 292 ಬಿಎನ್ಎಸ್: 2023 ಕಲಾಂ 103ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟನೆ ತಿಳಿಸಿದೆ.




