ಬಂಟ್ವಾಳ: 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬಂಟ್ವಾಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾವಳಪಡೂರು ಗ್ರಾಮದ ಮಧ್ವ ನಿವಾಸಿ ಮೊಹಮ್ಮದ್ ಅನ್ಸಾರ್ ಬಂಧಿತ ಆರೋಪಿಯಾಗಿದ್ದಾನೆ. ಈತ 2012ರಲ್ಲಿ ಕಾವಳಕಟ್ಟೆಯ ಮನೆಯೊಂದರಲ್ಲಿ ನಡೆಯುತ್ತಿದ್ದ ಜ್ಯೋತಿಷ್ಯಶಾಸ್ತ್ರದ ವಿಚಾರದಲ್ಲಿ ವಿವಾದದ ಹಿನ್ನೆಲೆ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದನು. ಈ ಕುರಿತು ಅನ್ಸಾರ್ ಮೇಲೆ ಪ್ರಕರಣ ದಾಖಲಾಗಿದ್ದು, ಆದರೆ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ಬಂಟ್ವಾಳ ಡಿವೈಎಸ್ಪಿ ಎಸ್.ವಿಜಯಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್ ಹಾಗೂ ಪಿಎಸ್ಐಗಳಾದ ಹರೀಶ್ ಎಂ.ಆರ್. ಮೂರ್ತಿ, ಲೋಲಾಕ್ಷ ಅವರ ನೇತೃತ್ವದಲ್ಲಿ ಹೆಡ್ಕಾನ್ಸ್ಟೆಬಲ್ ಗಣೇಶ್ಪ್ರಸಾದ್, ಕಾನ್ಸ್ಟೆಬಲ್ಗಳಾದ ಪ್ರವೀಣ್, ಶಿದ್ದಪ್ಪ, ಶಿವಾನಂದ ಮಡ್ಡಿ, ನಾಗರಾಜ್ ಅವರು ಬೆಳ್ತಂಗಡಿಯಲ್ಲಿ ಬಂಧಿಸಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.