ಕೋಮು ದ್ವೇಷದ ಆರೋಪ, ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಮೇಲೆ FIR, ಇಂದು ಉಡುಪಿ SP ವಿರುದ್ದ ಪ್ರತಿಭಟನೆ
ಕಾರ್ಕಳ: ಹಿಂದೂ ಜಾಗರಣ ವೇದಿಕೆಯ ಮುಖಂಡ ಕಾರ್ಕಳದ ಶ್ರೀಕಾಂತ್ ಶೆಟ್ಟಿ ಮೇಲೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಬಗ್ಗೆ ಹಿಂದೂ ಪರ ಸಂಘಟನೆಗಳು ಗರಂ ಆಗಿದೆ.
ಬೇರೆ ಬೇರೆ ಸಮುದಾಯಗಳ ನಡುವೆ ವೈರತ್ವ, ದ್ವೇಷ ಹಾಗೂ ವೈಮನಸ್ಸಿನ ಭಾವನೆಗಳನ್ನು ಉಂಟು ಮಾಡುವ ವೀಡಿಯೋವನ್ನು ಚಿತ್ರೀಕರಿಸಿ, ಅಶಾಂತಿ ಸೃಷ್ಠಿಸುವ ಉದ್ದೇಶದಿಂದ ವೀಡಿಯೋ ವೈರಲ್ ಮಾಡಿದ್ದಾರೆ ಎಂಬ ಆರೋಪ ಶ್ರೀಕಾಂತ್ ಶೆಟ್ಟಿ ಮೇಲಿದೆ. ಈ ಹಿನ್ನೆಲೆಯಲ್ಲಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 188/2024 ಕಲಂ: ಕಲಂ: 353(2) BNSನಂತೆ ಪ್ರಕರಣ ದಾಖಲಾಗಿರುತ್ತದೆ.
ಇಂದು ಉಡುಪಿ ಎಸ್ಪಿ ಕಚೇರಿ ಬಳಿ ಪ್ರತಿಭಟನೆ :
ಹಿಂದೂ ಸಂಘಟನೆಯ ಕಾರ್ಯಕರ್ತರ ವಿರುದ್ಧ ಹುಡುಕಿ ಹುಡುಕಿ ಸ್ವಯಂಪ್ರೇರಿತ ಸುಳ್ಳು ಕೇಸ್ ಹಾಕಿ ಅವರನ್ನು ಬಂಧಿಸಿ ಜೈಲುಗಟ್ಟುವ ಮೂಲಕ ಹಿಂದುತ್ವದ ಧ್ವನಿ ಅಡಗಿಸುವ ಪ್ರಯತ್ನ ಉಡುಪಿ ಎಸ್ಪಿ ವಿರುದ್ದ ಮಾಡುತಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಉಡುಪಿ ಎಸ್ಪಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಗೆ ಹಿಂದೂ ಸಂಘಟನೆಗಳಿಂದ ಕರೆ ನೀಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ವಿನಾಕಾರಣ ಭಜರಂಗದಳ ವಿಶ್ವಹಿಂದೂ ಪರಿಷತ್, ಹಿಂದು ಜಾಗರಣ ವೇದಿಕೆ ಸೇರಿದಂತೆ ಹಲವು ಹಿಂದೂ ಸಂಘಟನೆಗಳ 45ಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ಜಿಲ್ಲಾ ಪೋಲೀಸರು ದಾಖಲಿಸುತ್ತಾ ಬಂದಿದ್ದಾರೆ. ಇದನ್ನು ಖಂಡಿಸಿ ಪೋಲಿಸ್ ವರಿಷ್ಠಾಧಿಕಾರಿಯ ವಿರುದ್ಧವೇ ನಮ್ಮ ಪ್ರತಿಭಟನೆಯೇ ಹೊರತು ಪೊಲೀಸ್ ಇಲಾಖೆಯ ವಿರುದ್ಧವಲ್ಲ ಎಂದು ಸಂಘಟನೆಗಳ ಮುಖಂಡರುಗಳು ಕಿಡಿಕಾರಿದ್ದಾರೆ.




