ಮೂಲ್ಕಿಯಲ್ಲಿ ಚಿರತೆ ಹೆಜ್ಜೆ; ಜನರಲ್ಲಿ ಆತಂಕ
ಮೂಲ್ಕಿ : ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಅಕ್ಕಸಾಲಿಗರ ಕೇರಿ ಬಳಿ ಬುಧವಾರ(ಅ.23) ಸಂಜೆ ವೇಳೆಗೆ ನಾಲ್ಕು ಚಿರತೆ ಮರಿಗಳು ಕಂಡು ಬಂದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ ಅಕ್ಟೋಬರ್ 19 ರಂದು ರಾತ್ರಿ ಸ್ಥಳೀಯರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಚಿರತೆ ಸೆರೆ ಹಿಡಿದ ಸ್ಥಳದ ಸಮೀಪದ ತೋಟದಲ್ಲಿ ಇದೀಗ ನಾಲ್ಕು ಚಿರತೆ ಮರಿಗಳು ಓಡಾಡಿರುವ ಹೆಜ್ಜೆಗಳ ಗುರುತು ಕಂಡು ಬಂದಿವೆ. ಇದರಿಂದಾಗಿ ಸ್ಥಳೀಯರು ಮತ್ತಷ್ಟು ಆತಂಕಗೊಂಡಿದ್ದು, ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
ಅಕ್ಟೋಬರ್ 19 ರಂದು ರಾತ್ರಿ ಮೂಲ್ಕಿಯ ಅಕ್ಕಸಾಲಿಗರ ಕೇರಿ ಬಳಿಯ ಸದಾನಂದ ಕೋಟ್ಯಾನ್ ಎಂಬವರ ಮನೆಯ ಅಡುಗೆ ಕೋಣೆಯೊಳಗೆ ಏಕಾಏಕಿ ನುಗ್ಗಿದ್ದ ಚಿರತೆಯನ್ನು ಮೂಡುಬಿದಿರೆ ವಲಯ ಅರಣ್ಯ ಅಧಿಕಾರಿಗಳು ಸ್ಥಳೀಯ ಜನರ ಸಹಕಾರದಲ್ಲಿ ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ ಬೋನು ಮೂಲಕ ಸೆರೆ ಹಿಡಿದು ಜನರ ಆತಂಕವನ್ನು ದೂರ ಮಾಡಿದರು.




