ಬೆಳ್ತಂಗಡಿ: ಮತ್ತೆ ಕಾಡಾನೆ ಹಿಂಡು ದಾಳಿ: 150ಕ್ಕಿಂತಲೂ ಅಧಿಕ ಅಡಿಕೆ ಮರಗಳು ನಾಶ
ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಮಲ್ಲ, ನಂದಿಕಾಡು, ಆರ್ನಂದಿಕಾಡು ಪರಿಸರದಲ್ಲಿ ಕಾಡಾನೆಗಳ ಹಿಂಡು ಓಡಾಟ ನಡೆಸಿದ್ದು, ವ್ಯಾಪಕವಾಗಿ ಕೃಷಿ ಹಾನಿಯಾಗಿದೆ.
ಆನೆಗಳು ಸದಾಶಿವ ಮಲೆಕುಡಿಯ ಅವರ ತೋಟಕ್ಕೆ ನುಗ್ಗಿದ್ದು, ಸುಮಾರು 150 ಅಡಿಕೆ ಮರಗಳನ್ನು ಸಂಪೂರ್ಣವಾಗಿ ಮುರಿದು ಹಾಕಿವೆ. ತೆಂಗಿನ ಮರಗಳು ಹಾಗೂ ಇತರ ಮರಗಳನ್ನೂ ನೆಲಕ್ಕೆ ಉರುಳಿಸಿವೆ. ಇವರದ್ದೇ ಸುಮಾರು ಒಂದೂವರೆ ಎಕ್ರೆ ಗದ್ದೆಯಲ್ಲಿನ ಭತ್ತದ ಕೃಷಿಯನ್ನೂ ಸಂಪೂರ್ಣವಾಗಿ ನಾಶ ಮಾಡಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಮನೆಗಳ ಸಮೀಪದಲ್ಲೇ ಕಾಡಾನೆಗಳು ಓಡಾಡಿದ್ದು, ಇದು ಜನರು ಆತಂಕ ಹೆಚ್ಚಲು ಕಾರಣವಾಗಿದೆ. 6ಕ್ಕೂ ಹೆಚ್ಚು ಆನೆಗಳು ತಂಡದಲ್ಲಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಆನೆಗಳು ಇದೇ ಪರಿಸರದ ಅರಣ್ಯದಲ್ಲಿ ಬೀಡು ಬಿಟ್ಟಿರುವ ಅನುಮಾನವಿದ್ದು, ಸ್ಥಳೀಯ ಜನರಲ್ಲಿ ಆತಂಕ ಹೆಚ್ಚಿಸಿದೆ. ಕೆಲವು ದಿನಗಳ ಹಿಂದೆ 6ಕ್ಕೂ ಹೆಚ್ಚು ಆನೆಗಳಿದ್ದ ಹಿಂಡೊಂದು ಚಾರ್ಮಾಡಿಯಲ್ಲಿ ಕೃಷಿಗೆ ಹಾನಿಯುಂಟು ಮಾಡಿತ್ತು.




