ಸುರತ್ಕಲ್: ಮಜ್ಜಿದುಲ್ಲಾ ಹುದಾಜುಮಾ ಮಸೀದಿಗೆ ಕಲ್ಲೆಸೆದ ಪ್ರಕರಣ: ಆರೋಪಿ ಭರತ್ ಶೆಟ್ಟಿಯ ಮೇಲಿದೆ ಒಟ್ಟು 12 ಪ್ರಕರಣಗಳು
ಮಂಗಳೂರು: ಸುರತ್ಕಲ್ ಸಮೀಪದ ಕಾಟಿಪಳ್ಳ 3ನೇ ಬ್ಲಾಕ್ನಲ್ಲಿರುವ ‘ಮಜ್ಜಿದುಲ್ಲಾ ಹುದಾ ಜುಮ್ಮಾ ಮಸೀದಿ’ಗೆ ಭಾನುವಾರ ರಾತ್ರಿ ಕಲ್ಲೆಸೆದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರು, ಎರಡು ಬೈಕು ಹಾಗೂ ನಾಲ್ಕು ಮೊಬೈಲ್ ಫೋನ್ಗಳನ್ನು ಆರೋಪಿಗಳಿಂದ ಸ್ವಾಧೀನ ಪಡಿಸಿಕೊಂಡಿದ್ದಾರೆ.
ಸುರತ್ಕಲ್ ಕಾನಕಟ್ಟಿಯ ಆಶ್ರಯ ಕಾಲೊನಿ ನಿವಾಸಿ ಭರತ್ ಶೆಟ್ಟಿ (26 ವರ್ಷ), ಚೆನ್ನಪ್ಪ ಶಿವಾನಂದ ಚಲವಾದಿ ಮುತ್ತು (19), ಚೇಳಾಯ್ತು ಗ್ರಾಮದ ಖಂಡಿಗೆ ಪಾಡಿ ನಿವಾಸಿ ನಿತಿನ್ ಹಡಪ (22), ಮುಂಚೂರು ಗ್ರಾಮದ ಕೊಡಿಪಾಡಿ ನಿವಾಸಿ ಸುಜಿತ್ ಶೆಟ್ಟಿ (23), ಹೊಸಬೆಟ್ಟು ಗ್ರಾಮದ ಈಶ್ವರ ನಗರದ ಅಲ್ಪಪ್ಪ ಅಲಿಯಾಸ್ ಮನು (24) ಹಾಗೂ ಕಾಟಿಪಳ್ಳ ಮೂರನೇ ಬ್ಲಾಕ್ ನಿವಾಸಿ ಪ್ರೀತಮ್ ಶೆಟ್ಟಿ (34) ಬಂಧಿತರು.
ಕಾರ್ತಿಕ್ ಕುಲಾಲ್, ವಿನೋದ್ ಕುಮಾರ್, ಮಂಜುನಾಥ್ ಆಯಟ್ಟಿ ಅವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿದ್ದರು. ವಿಶೇಷ ತಂಡದ ಪೊಲೀಸರು ಕದ್ರಿ ಮಂಜುನಾಥ ದೇವಸ್ಥಾನದ ಬಳಿಯ ರಸ್ತೆಯಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದರು.
ಆರೋಪಿಯಾದ ಭರತ್ ಶೆಟ್ಟಿ ಈ ಹಿಂದೆಯೂ ಒಟ್ಟು 12 ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಇನ್ನೊಬ್ಬ ಆರೋಪಿ ಚೆನ್ನಪ್ಪ ಶಿವಾನಂದ ಚಲವಾದಿ ಅಲಿಯಾಸ್ ಮುತ್ತು ಐದು ಪ್ರಕರಣಗಳಲ್ಲಿ ಆರೋಪಿಯಾಗಿದ್ದ.
ಆರೋಪಿ ನಿತಿನ್ ಹಡಪ ವಿರುದ್ಧ ಈ ಹಿಂದೆಯೂ ಒಂದು ಪ್ರಕರಣ ದಾಖಲಾಗಿತ್ತು. ಆರೋಪಿ ಅಣ್ಣಪ್ಪ ಅಲಿಯಾಸ್ ಮನು ಈ ಹಿಂದೆ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಆರೋಪಿ ಪ್ರೀತಮ್ ಶೆಟ್ಟಿ ಈ ಹಿಂದೆ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.