ಬಂಟ್ವಾಳ: ಗಣೇಶೋತ್ಸವ ಶೋಭಾಯಾತ್ರೆ: ಭಕ್ತಾದಿಗಳಿಗೆ ಐಸ್ ಕ್ರೀಮ್, ನೀರು ವಿತರಿಸಿ ಸೌಹಾರ್ದತೆ ಮೆರೆದ ಕೊಡಾಜೆಯ ಮುಸ್ಲಿಂ ಐಕ್ಯ ವೇದಿಕೆ
ಬಂಟ್ವಾಳ: ತಾಲೂಕಿನ ಅನಂತಾಡಿ ಕರಿಂಕದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆದ ಶ್ರೀ ಗಣೇಶನ ಶೋಭಾಯಾತ್ರೆಯಲ್ಲಿ ಭಾಗವಹಿಸಿದ ಭಕ್ತಾದಿಗಳಿಗೆ ಮಾಣಿ ಸಮೀಪದ ಕೊಡಾಜೆಯ ಮುಸ್ಲಿಂ ಐಕ್ಯ ವೇದಿಕೆಯ ವತಿಯಿಂದ ಐಸ್ ಕ್ರೀಮ್ ಹಾಗೂ ನೀರು ವಿತರಿಸಿ ಸೌಹಾರ್ದತೆ ಮೆರೆದಿದ್ದಾರೆ.
ಭಾನುವಾರ ಸಂಜೆ ಶ್ರೀ ಗಣೇಶನ ಶೋಭಾಯಾತ್ರೆಯು ಕರಿಂಕದಿಂದ ಕೊಡಾಜೆಗೆ ಆಗಮಿಸಿ ನೇರಳಕಟ್ಟೆ ತನಕ ಸಾಗಿ ಅಲ್ಲಿಂದ ಪುನಃ ಅನಂತಾಡಿ ತೆರಳಿತು. ಈ ಮಧ್ಯೆ ಕೊಡಾಜೆಗೆ ಆಗಮಿಸಿದ ವೇಳೆ ಭಕ್ತಾದಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡ ಕೊಡಾಜೆ ಮುಸ್ಲಿಂ ಐಕ್ಯ ವೇದಿಕೆಯ ಸದಸ್ಯರು ಸೌಹಾರ್ದತೆಯ ಸಂಕೇತವಾಗಿ ಐಸ್ ಕ್ರೀಮ್ ಹಾಗೂ ಪಾನೀಯ ವಿತರಿಸಿದರು.
ಈ ಸಂದರ್ಭದಲ್ಲಿ ಚಲನಚಿತ್ರ ನಟರಾದ ಚೇತನ್ ರೈ ಮಾಣಿ, ಚಂದ್ರಹಾಸ ಶೆಟ್ಟಿ, ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ, ಸನತ್ ಕುಮಾರ್ ರೈ, ಬಾಲಕೃಷ್ಣ ಆಳ್ವ ಕೊಡಾಜೆ, ನಾರಾಯಣ ಸಾಲಿಯಾನ್, ಜಯಂತಿ ವಿ ಪೂಜಾರಿ, ಲತೀಫ್ ನೇರಳಕಟ್ಟೆ, ಇರ್ಷಾದ್ ಪಂತಡ್ಕ ಮಾತನಾಡಿ ಇಲ್ಲಿನ ಶಾಂತಿ ಸೌಹಾರ್ದತೆಯ ಮಾದರಿ ದೇಶದೆಲ್ಲೆಡೆ ಪಸರಿಸಲಿ ಎಂದು ಶುಭ ಹಾರೈಸಿದರು.
ಪರಿಸರದ ಹಿಂದು – ಮುಸ್ಲಿಂ ಸಮುದಾಯದ ಬಾಂದವರು, ಕೊಡಾಜೆ ಮುಸ್ಲಿಂ ಐಕ್ಯ ವೇದಿಕೆಯ ಸದಸ್ಯರು ಭಾಗವಹಿಸಿದ್ದರು. ಮುಖಂಡರಾದ ಫಾರೂಕ್ ಗೋಳಿ ಕಟ್ಟೆ, ರಿಯಾಜ್ ನೇರಳಕಟ್ಟೆ, ಸಲೀಂ ಮಾಣಿ, ರಫೀಕ್ ಯಸ್.ಯಸ್, ಅಶ್ರಫ್ ಭಾರತ್ ವೇಹಿಕಲ್, ರಝಾಕ್ ಕರಾವಳಿ, ಶರೀಫ್ ಗೋವ, ಮನ್ಸೂರ್, ರಫೀಕ್ ಪಂತಡ್ಕ, ಆದಮ್ SMS, ನೌಫಲ್ ಕೊಡಾಜೆ, ಫಾರೂಕ್ ಆಟೋ ಮತ್ತಿತರರು ಉಪಸ್ಥಿತರಿದ್ದರು.