ಬಂಟ್ವಾಳ: ಬಾರ್ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ: ಇಬ್ಬರ ಬಂಧನ
ಬಂಟ್ವಾಳ: ಬಾರ್ ಒಂದರಲ್ಲಿ ಕುಡಿದು ಅಲ್ಲಿನ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಇಬ್ಬರು ಪುಡಿ ರೌಡಿಗಳನ್ನು ಪುಂಜಾಲಕಟ್ಟೆ ಎಸ್.ಐ.ನಂದಕುಮಾರ್ ನೇತ್ರತ್ವದ ಪೋಲೀಸ್ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಮೂಲತಃ ಬಂಟ್ವಾಳ ನಿವಾಸಿಗಳಾದ ಸಂತೋಷ್ ಮತ್ತು ವಿಶ್ವನಾಥ ನಟೋರಿಯಸ್ ಆರೋಪಿಗಳಾಗಿದ್ದು, ಘಟನೆಯ ಬಳಿಕ ತಲೆಮರೆಸಿಕೊಂಡಿದ್ದರು. ಇಂದು ಪೊಲೀಸರ ತಂಡ ಮಂಗಳೂರಿನಲ್ಲಿ ಬಂಧಿಸಿದೆ.
ಆಗಸ್ಟ್ 4 ರಂದು ರಾತ್ರಿ ವೇಳೆ ವಾಮದಪದವಿನ ಪಾಂಗಲ್ಪಪಾಡಿಯಲ್ಲಿರುವ ಪ್ರಕಾಶ್ ಬಾರ್ ಎಂಡ್ ರೆಸ್ಟಾರೆಂಟ್ ನಲ್ಲಿ ಘಟನೆ ನಡೆದಿತ್ತು. ಬಂಟ್ವಾಳದಿಂದ ವಾಮದಪದವಿಗೆ ತೆರಳಿದ ಇಬ್ಬರು ರೌಡಿಗಳು ಇಲ್ಲಿನ ಪ್ರಕಾಶ್ ಬಾರ್ ನಲ್ಲಿ ಕುಡಿದು ಬಳಿಕ ಅಲ್ಲಿನ ಸಿಬ್ಬಂದಿಗಳಿಗೆ ಹಾಗೂ ಅಡುಗೆ ಮಾಡುವ ಕೆಲಸಗಾರರ ಮೇಲೆ ರಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಘಟನೆಯಿಂದ ಅಡುಗೆ ಕೆಲಸಗಾರನ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇದಲ್ಲದೆ ಬಾರ್ ಕಂಪ್ಯೂಟರ್ ಸಹಿತ ಎಲೆಕ್ಟ್ರಾನಿಕ್ ವಸ್ತುಗಳನ್ನು ಹಾಗೂ ಬಾರ್ ನೊಳಗಿನ ಬೆಲೆಬಾಳುವ ವಸ್ತುಗಳನ್ನು ಇಬ್ಬರು ಒಡೆದು ಪುಡಿಗೈದಿದ್ದರು.
ಇದೆಲ್ಲಾ ದೃಶ್ಯ ಗಳು ಇಲ್ಲಿನ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿತ್ತು.
ಘಟನೆ ನಡೆಸಿದ ಖತರ್ ನಕ್ ಆರೋಪಿಗಳು ತಲೆಮರೆಸಿಕೊಂಡಿದ್ದರು.
ಇಬ್ಬರು ಆರೋಪಿಗಳ ಪೈಕಿ ಸಂತೋಷ್ ಒಬ್ಬಾತ ಕೆಲ ಸಮಯದ ಹಿಂದೆ ಕೊಲೆಯತ್ನ ಆರೋಪದಲ್ಲಿ ಜೈಲುಪಾಲಾಗಿದ್ದು, ಜಾಮೀನಿನ ಮೇಲೆ ಹೊರಗಡೆ ಬಂದಿದ್ದ. ಬಂಟ್ವಾಳದ ವ್ಯಕ್ತಿಯೋರ್ವನ ಕೈ ಕಡಿದು ಜೈಲು ಪಾಗಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಈತನ ಮೇಲೆ ರೌಡಿಶೀಟರ್ ಪ್ರಕರಣ ದಾಖಲಾಗಿತ್ತು. ಇದೀಗ ಮತ್ತೆ ವಾಮದಪದವಿನಲ್ಲಿ ಗಲಾಟೆ ಮಾಡಿದ್ದಲ್ಲದೆ ಕೊಲೆಯತ್ನ ಪ್ರಕರಣದಲ್ಲಿ ಬಂಧನವಾಗಿದೆ. ಪುಂಜಾಲಕಟ್ಟೆ ಪೋಲೀಸರ ತಂಡ ಪ್ರಕರಣದ ಬೆನ್ನತ್ತಿ ಆರೋಪಿಗಳ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.




