ಪುತ್ತೂರು: ಲಾರಿ ಟಯರ್ ಬದಲಾಯಿಸುವಾಗ ಹೊರ ಚಿಮ್ಮಿದ ಡಿಸ್ಕ್ ರಿಂಗ್: ವ್ಯಕ್ತಿ ಗಂಭೀರ
ಪುತ್ತೂರು: ಲಾರಿಯೊಂದರ ಟಯರ್ ಬದಲಿಸುವಾಗ ಡಿಸ್ಕ್ ರಿಂಗ್ ಹೊರ ಚಿಮ್ಮಿ ದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡದ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ಸೋಮವಾರ ರಾತ್ರಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕರಾಯದ ಜನತಾ ಕಾಲನಿ ನಿವಾಸಿ ರಶೀದ್ ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದು ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಾವನಿಗೆ ಸೇರಿದ ಕಲ್ಲು ಸಾಗಾಟದ ಲಾರಿಯ ಟಯರ್ ಪಂಕ್ಚರ್ ಆಗಿದ್ದ ಕಾರಣ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿಲ್ಲಿಸಿ ಪಂಚರ್ ಮಾಡಿಸಿಕೊಂಡು ಆಟೋ ರಿಕ್ಷಾದಲ್ಲಿ ಟಯರ್ ತಂದಿದ್ದರು. ಟಯರ್ ಬದಲಿಸುವ ವೇಳೆ ಒಮ್ಮೆಲೇ ಟಯರ್ ಡಿಸ್ಕ್ ನ ರಿಂಗ್ ಹೊರಚಿಮ್ಮಿದೆ. ರಭಸಕ್ಕೆ ಟಯರ್ ಸಹಿತ ರಶೀದ್ ಅವರು ತುಸು ದೂರ ಕಾಂಪೌಂಡ್ ಗೆ ಎಸೆಯಲ್ಪಟ್ಟಿದ್ದಾರೆ. ತೀವ್ರ ಗಾಯಗೊಂಡ ರಶೀದ್ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.




