ವಿಟ್ಲ: ನಿರ್ಮಾಣ ಹಂತದಲ್ಲಿ ಸೇತುವೆ ಕುಸಿತ ಪ್ರಕರಣ: ಗಾಯಗೊಂಡ 7 ಮಂದಿ ಚೇತರಿಕೆ
ವಿಟ್ಲ : ಪುಣಚ ಗ್ರಾಮದ ಬರೆಂಜ – ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪ್ಪಾಡಿಯಲ್ಲಿ ನಿರ್ಮಾಣ ಹಂತದಲ್ಲಿ ಸೇತುವೆ ಕುಸಿದುಬಿದ್ದು, ಗಾಯಗೊಂಡ 7 ಮಂದಿ ಆಸ್ಪತ್ರೆಗಳಲ್ಲಿ ಚೇತರಿಸುತ್ತಿದ್ದಾರೆ.
ಗಾಯಾಳುಗಳಾದ ಮೈಸೂರು ನಂಜನಗೂಡು ಮೂಲದ ಮಹೇಶ್ (೬೩), ಗದಗ ಮೂಲದ ನಾಗರಾಜ (೪೦), ಪುತ್ತೂರು ನಿವಾಸಿ ವಿಜಯ(೩೫) ಪುತ್ತೂರು ಆಸ್ಪತ್ರೆಯಲ್ಲಿ ಮತ್ತು ಮಾಣಿಯಲ್ಲಿರುವ ಕಾಂಕ್ರೀಟ್ ಮಿಕ್ಸಿಂಗ್ ಘಟಕದಲ್ಲಿ ಕೆಲಸ ನಿರ್ವಹಿಸುವ ಕೋಲ್ಕತ್ತ ಮೂಲದ ಯೂಸೂಫ್ (೫೦), ಮಾಥೋಬ್ (೩೨), ಆಕ್ತರುಲ್ (೪೨) ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜವಹಾರ್ (೨೮) ಪುತ್ತೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಯಲ್ಲಿದ್ದಾರೆ.
ಮಲ್ಲಿಪ್ಪಾಡಿಯಲ್ಲಿ ಸಾಗುವ ತೋಡಿಗೆ ಸೇತುವೆ ನಿರ್ಮಾಣ ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಂಡಿದ್ದು ಕುಸಿದುಬಿದ್ದ ವಸ್ತುಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.
ಗುತ್ತಿಗೆದಾರ ಕಡಬ ನಿವಾಸಿ, ರಾಜೇಂದ್ರ ಪ್ರಸಾದ್ ಶೆಟ್ಟಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.




