ಉಡುಪಿ: ಕೂಲಿ ಕಾರ್ಮಿಕರ ನಡುವೆ ಹೊಡೆದಾಟ: ನೆಲ್ಯಾಡಿಯ ವ್ಯಕ್ತಿ ಸಾವು
ಉಡುಪಿ: ಕೂಲಿ ಕಾರ್ಮಿಕರೊಬ್ಬರು ಸಹ ಕಾರ್ಮಿಕರ ಜತೆ ಜಗಳಾಡಿ ಬಳಿಕ ನಡೆದ ಹೊಡೆದಾಟದಿಂದ ಸುಸ್ತಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕು ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಆಲಂಪಾಡಿ ನಿವಾಸಿ ಜಿ.ಎ.ಸಿದ್ದಿಕ್ (40)ಮೃತಪಟ್ಟ ಕಾರ್ಮಿಕರಾಗಿದ್ದಾರೆ.
ಸಿದ್ದಿಕ್ ಮೂಲತ: ಹಾಸನ ಜಿಲ್ಲೆ ಸಕಲೇಶಪುರ ಆನೆಮಹಲ್ ನಿವಾಸಿಯಾಗಿದ್ದು ಹಲವು ವರ್ಷಗಳಿಂದ ನೆಲ್ಯಾಡಿಯಲ್ಲಿ ದ್ವಿಚಕ್ರ ವಾಹನಗಳ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದು ಪತ್ನಿ, ಮಕ್ಕಳೊಂದಿಗೆ ಆಲಂಪಾಡಿಯಲ್ಲಿ ವಾಸ್ತವ್ಯವಿದ್ದರು. ಇತ್ತೀಚಿನ ಕೆಲ ಸಮಯದಿಂದ ಮೆಕ್ಯಾನಿಕ್ ವೃತ್ತಿ ಬಿಟ್ಟು ಬೇರೆ ಕೆಲಸ ನಿರ್ವಹಿಸುತ್ತಿದ್ದರು.
ಸಿದ್ದಿಕ್ ಹಾಗೂ ನೆಲ್ಯಾಡಿಯ ಪ್ರಶಾಂತ ಎಂಬವರನ್ನು ಬೋಪಣ್ಣ ಎಂಬವರು ಇಂಟರ್ಲಾಕ್ ಅಳವಡಿಕೆ ಕೆಲಸಕ್ಕೆಂದು ಬ್ರಹ್ಮಾವರಕ್ಕೆ ಕರೆದೊಯ್ದಿದ್ದರು ಎನ್ನಲಾಗಿದೆ. ಬ್ರಹ್ಮಾವರದ ಹಾರಾಡಿ ನಿವಾಸಿ ಅರುಣ್ ಆಲ್ಪ್ರೇಡ್ ಎಂಬವರ ಅಂಗಳದಲ್ಲಿ ಎಪ್ರಿಲ್ 10 ರಂದು ಬೆಳಗ್ಗೆ ಕೆಲಸ ಮಾಡುತ್ತಿದ್ದಾಗ ಕಾರ್ಮಿಕರ ನಡುವೆ ಜಗಳ ನಡೆದಿದೆ.
ಸಹ ಕಾರ್ಮಿಕರೊಂದಿಗಿನ ಜಗಳ ಮತ್ತು ಹೊಡೆದಾಟದಿಂದ ಸಿದ್ದಿಕ್ ಸುಸ್ತಾಗಿದ್ದರು. ಇದನ್ನು ಗಮನಿಸಿದ ಸಹ ಕಾರ್ಮಿಕರು ಅವರನ್ನು ಮಧ್ಯಾಹ್ನ ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಸಿದ್ದಿಕ್ ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ವರದಿಯಾಗಿದೆ.




