ಉಪ್ಪಿನಂಗಡಿ: ಸತತ ಘರ್ಷಣೆ ಹಿನ್ನೆಲೆ ಘಟನೆ ಪೊಲೀಸ್ ಫುಲ್ ಎಲರ್ಟ್: ಹೆಚ್ಚುವರಿ ಪೊಲೀಸರ ನಿಯೋಜನೆ
ಉಪ್ಪಿನಂಗಡಿ: ಸತತ ಎರಡು ದಿನಗಳಿಂದ ನಡೆದಿರುವ ಹಲ್ಲೆ ಪ್ರಕರಣದಿಂದಾಗಿ ಉಪ್ಪಿನಂಗಡಿ ಉದ್ವಿಗ್ನವಾಗಿದ್ದು, ಹಿಂದು – ಮುಸ್ಲಿಂ ನಡುವೆ ಗಲಭೆ ಹತ್ತಿಕೊಳ್ಳದಂತೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇಬ್ಬರು ಪೊಲೀಸ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ನಾಲ್ಕು ಪಿಎಸ್ಐ, 38 ಹೆಡ್ ಕಾನ್ಸ್ ಟೇಬಲ್, ಮೂರು ಡಿಎಆರ್ ತುಕಡಿ, ಎರಡು ಕೆಎಸ್ ಆರ್ ಪಿ ತುಕಡಿಗಳನ್ನು ಸ್ಥಳದಲ್ಲಿ ಮೊಕ್ಕಾಂ ಇರಿಸಲಾಗಿದೆ.
ಇದೇ ವೇಳೆ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಉಪ್ಪಿನಂಗಡಿ ಠಾಣೆಯಿಂದಲೂ ಹೆಚ್ಚುವರಿ ಪೊಲೀಸರನ್ನು ಉಪ್ಪಿನಂಗಡಿಯಲ್ಲಿ ನಿಯೋಜನೆ ಮಾಡಲಾಗಿದೆ. ಪ್ರಕರಣದ ಆರೋಪಿಗಳ ಪತ್ತೆಗಾಗಿ ಈ ನಾಲ್ಕು ಠಾಣೆಗಳ ಅಪರಾಧ ವಿಭಾಗದ ಪ್ರಮುಖರನ್ನು ಒಳಗೊಂಡು ವಿಶೇಷ ತಂಡವನ್ನು ರಚಿಸಲಾಗಿದೆ.
ಈಗಾಗ್ಲೇ ಶನಿವಾರ ರಾತ್ರಿ ನಡೆದ ಝಕರಿಯಾ ಮತ್ತಿತರರ ಮೇಲಿನ ಹಲ್ಲೆ ಪ್ರಕರಣ ಸಂಬಂಧಿಸಿ ಜಯರಾಮ (21) ಮತ್ತು ಶೋಧನ್ (21) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಸಂಜೆ ಮೀನು ಮಾರಾಟ ಮಾಡುತ್ತಿದ್ದ ಅಶೋಕ್ ಮತ್ತು ಮೀನು ಖರೀದಿಗೆ ಬಂದಿದ್ದ ಮಹೇಶ್ ಎಂಬವರ ಮೇಲೆ ತಂಡ ದಾಳಿ ನಡೆಸಿತ್ತು. ಹೀಗಾಗಿ ಉಪ್ಪಿನಂಗಡಿ ಪರಿಸರ ಉದ್ವಿಗ್ನ ಸ್ಥಿತಿಗೆ ಒಳಗಾಗಿದ್ದು ಹೆಚ್ಚಿನ ಅನಸಹುತ ಕಾರಣವಾಗುವ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ಎಲರ್ಟ್ ಆಗಿದ್ದಾರೆ.